top of page

ಓದುವ ಮುನ್ನ........

 

ನಾನು ಮತ್ತು ಗುರುಪ್ರಸಾದ ಭಾರತದಲ್ಲಿದ್ದಾಗ ಪರಿಚಯವೇ ಇರದೆ
, ಅಮೆರಿಕಾದಲ್ಲಿ ಭೇಟಿಯಾದೆವು. ಈಗ ದಶಕದ ನಂತರವೂ ನಮ್ಮ ಗೆಳೆತನ ಮುಂದುವರೆದಿದೆ. ವಯಸ್ಸಿನ ಅಂತರವೆಂದೂ ಕಾರಣವಾಗಿರದೇ, ಸಮಾನ ಅಭಿರುಚಿ ಮತ್ತು ಆಸಕ್ತಿಗಳು ನಮ್ಮ ಮಿತ್ರತ್ವವನ್ನು ಭದ್ರಗೊಳಿಸಿವೆ.

ಅಮೆರಿಕಾ, ಅಷ್ಟೇ ಏಕೆ ವಿದೇಶೀ ಪ್ರವಾಸ, ಪ್ರಯಾಣಗಳು ಈಗೊಂದು ವೈಭವವಲ್ಲದ ದಿನಗಳಲ್ಲೂ ಗುರುಪ್ರಸಾದರ ನಿರೂಪಣಾ ಶೈಲಿಯಿಂದ ಅವರ ಬರಹ ಆಪ್ತವೆನ್ನಿಸುತ್ತದೆ. “ನನ್ನ ಅಮೆರಿಕತೆ”ಯ ಅಧ್ಯಾಯಗಳ ಹೆಸರನ್ನು ನೋಡಿದಾಗಲೇ, ಅಮೆರಿಕೆಯನ್ನು ಕುರಿತಂತೆ ಅವರು ತಳೆದ ನಿಲುವುಗಳ ದೊಡ್ಡದೊಂದು ಬೀಸು ಹಾದುಹೋಗುವಂತಿದೆ. ಕಾರ್ಪೋರೇಟ್ ಜಗತ್ತಿನ ಕುತೂಹಲಕಾರೀ ಸಂಗತಿಗಳಲ್ಲಿ ಮುಖ್ಯವೆನ್ನಿಸುವುದು ಅಲ್ಲಿನ ಆಂತರಿಕ ರಾಜಕೀಯಗಳು, ಅದನ್ನು ನಿರ್ವಹಿಸುವ ಅಧಿಕಾರಿಗಳ ಚಾಣಾಕ್ಷ ನಡೆಗಳು. ಹಾಗೆ ನೋಡಿದರೆ ಕನ್ನಡದಲ್ಲಿ ಮೊದಲಬಾರಿಗೆ ಕಾರ್ಪೊರೇಟ್ ವಲಯದ ಆಂತರ್ಯಗಳನ್ನು ಬಿಚ್ಚಿಟ್ಟವರಲ್ಲಿ ಯಶವಂತ ಚಿತ್ತಾಲರೇ ಮೊದಲಿಗರಿರಬಹುದು. ಆಗಿನ ಪ್ರಪಂಚಕ್ಕೂ, ಈಗಿನ ದಿನಗಳಿಗೂ ಅರ್ಥಾರ್ಥ ಸಂಬಂಧವಿರಲಾರದು. ಹಾಗಿದ್ದೂ ಈ ಕ್ಷೇತ್ರದಲ್ಲಿರುವ ತಂತ್ರಗಾರಿಕೆ, ಶತ್ರುಗಳನ್ನು ಹಣಿಯುವ ನಾಜೂಕುತನಗಳನ್ನು ಇಂದಿನ ಎಐ ಕೂಡ, ಇವರಿಂದಲೇ ಕಲಿಯಬಹುದು ಎನ್ನುವಷ್ಟು ಬೆಳೆದಾಗಿದೆ. ಹಾಗಿದ್ದೂ ಕನ್ನಡದಲ್ಲಿ ಕಾರ್ಪೊರೇಟ್ ಜಗತ್ತಿನ ರಾಜಕೀಯಗಳು ಸಾಹಿತ್ಯಕವಾಗಿ ತೆರೆದುಕೊಂಡಿರುವುದು ಇಂದಿಗೂ ಕಡಿಮೆಯೇ ಸರಿ. ಏಕೆಂದರೆ, ಸಾಹಿತ್ಯಕ ಅಭಿರುಚಿಯಿರುವ ಕೆಲವು ಮಂದಿಗಾದರೂ ಇದನ್ನೆಲ್ಲ ದಾಖಲಿಸಬೇಕೆಂಬ ತುಡಿತವಿದ್ದರೂ, ಹಾಗೆ ಮಾಡಲು ಅವರ ವೃತ್ತಿಯ ಒತ್ತಡಗಳು ಇದನ್ನು ಮಾಡಗೊಡದಿರುವುದೂ ವಾಸ್ತವ.

ಗುರುಪ್ರಸಾದರ ಈ ಅನುಭವಮಾಲಿಕೆಯು ರೋಚಕತೆಯಿಂದ ಆರಂಭವಾಗಿ
, ಕುತೂಹಲ ಹುಟ್ಟಿಸುತ್ತ ಸಾಗುತ್ತದೆ. ಟೆಕ್ಕಿಗಳ ಪರಿಸರದಲ್ಲಿ ಇಂಥವು ಸಾವಿರಾರು ನಡೆದು ಅವರಿಗೆ ಕುತೂಹಲದ ಸಂಗತಿಯಾಗಿರದೇ ಇರಬಹುದು. ಜನಸಾಮಾನ್ಯರಿಗೆ ಅವರ ಇಂಜಿನಿಯರಿಂಗ್ ಪದವಿಗಳು, ವಿದೇಶೀ ವಾಸ್ತವ್ಯ, ಕರುಬುವಂಥ ಸಂಬಳಸಾರಿಗೆಗಳು ಆಕರ್ಷಣೀಯವೇ ಹೌದು. ಆದರೆ ಅವರ ಶ್ರಮದಾಯಕ ದುಡಿಮೆ, ಬಿಡುವಿಲ್ಲದ ಜೀವನ ಕ್ರಮಗಳನ್ನು ಗಮನಿಸಿರುವವರು, ತಾವು ಸುಖಿಗಳೆಂದೂ ತಿಳಿದುಕೊಂಡಿರುತ್ತಾರೆ. ಎಲ್ಲರಿಗಿರುವಂತೆ ವಿದೇಶೀ ಯಾತ್ರೆ ಲಭ್ಯವಾದರೆ ಯಾಕಾಗಬಾರದು ಎಂಬ ಭಾವವಿರುವಂತೆಯೇ, ಅಲ್ಲಿಯೇ ನೆಲೆಸಿದರೇನು ಗತಿ ಎಂಬ ಭಯವನ್ನೂ ಮೈಗೂಡಿಸಿಕೊಂಡ ಕಾರಣಕ್ಕೆ, ಈ ಕೃತಿಯನ್ನು ನಿರ್ಮಮಕಾರದಿಂದ ಬರೆಯಲು ಸಾಧ್ಯವಾಗಿದೆ.


ಅಲ್ಲಲ್ಲಿ ಮಿಂಚಿರುವ ಹಾಸ್ಯಮಿಶ್ರಿತ ದೃಷ್ಟಿಕೋಣದಲ್ಲಿ “ಅನುಭವದ ಹೆಸರಿನಲ್ಲಿ ಅನೇಕ ತಪ್ಪುಗಳನ್ನು ಮಾಡಿಕೊಂಡಿರುತ್ತೇವೆ” ಎಂದಿರುವುದು ವಾಸ್ತವವೇ ಹೌದು. ‘ಕೆಮಿಕಲ್ಮಷ’ವೆಂಬಂಥ ಶಬ್ದಗಳನ್ನೂ ಟಂಕಿಸಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ದೇಶದ ನೆನಪು ಸಮಗ್ರವಾಗಿ ಬರುವುದೆಂದರೆ ಅದು ವಿದೇಶೀ ನೆಲದಲ್ಲಿ ಇದ್ದಾಗ ಮಾತ್ರ ಎಂಬ ಭಾವವು ಉದ್ದಕ್ಕೂ ವ್ಯಕ್ತವಾಗಿದೆ. ಅದೇ ರೀತಿ ಭಾರತೀಯರ ಮನೋಧರ್ಮಗಳು ವಿದೇಶದಲ್ಲಿ ಬದಲಾಗುವುದನ್ನು ಹಲವಾರು ಬಾರಿ ಗುರುತಿಸಿದ್ದಾರೆ. ಕೃಷಿ, ಕನ್ನಡ, ಹಾಸ್ಯಪ್ರಿಯತೆಯ ಅವರ ಅಭಿರುಚಿಗಳು, ಕನ್ನಡದ ಬಳಕೆ ಹೆಚ್ಚಲೆಂದು ಸ್ವತಃ ಕನ್ನಡದಲ್ಲೇ ಸಂದೇಶಗಳನ್ನು ಕಳಿಸಿ, ಜನರ ಗಮನವನ್ನು ಸೆಳೆಯುವ ಅವರ ಉದ್ದೇಶ ಮೆಚ್ಚತಕ್ಕದ್ದೇ ಸರಿ.


ಕನ್ನಡ ಸಂಘದ ಅಧ್ಯಕ್ಷರಾಗಲು ಅಲ್ಲಿ ಚುನಾವಣೆ ನಡೆಸುವ ಅಗತ್ಯವಿಲ್ಲ. ಯಾರಾದರೂ ಮುಂದೆ ಬಂದರೆ, ಅದರಲ್ಲೂ ಹೊಸಬರನ್ನು ಹಿಡಿದು ಪಟ್ಟಕಟ್ಟಿದರೆ ಹಿಂದಿನ ಅಧ್ಯಕ್ಷ ಗೆದ್ದಂತೆ ಎಂಬಂತಿದ್ದ ವಾತಾವರಣದಲ್ಲಿ ಲಭಿಸಿದ ಅಧ್ಯಕ್ಷ ಗಾದಿ ಅವರ ಅಭಿರುಚಿಗೆ ಹೊಂದುವಂತಿತ್ತು. ಕನ್ನಡ ಚಲನಚಿತ್ರಗಳ ಪ್ರದರ್ಶನ, ನಾಟಕದ ಕಾರ್ಯಕ್ರಮಗಳನ್ನು ಇದ್ದ ಒಂದೂವರೆ ವರ್ಷದ ಅಲ್ಪಾವದಧಿಯಲ್ಲಿ ಆಯೋಜಿಸಿ ಶಹಭಾಸ್ ಎನ್ನಿಸಿಕೊಂಡಿದ್ದನ್ನು ನಾನೇ ಸ್ವತಃ ನೋಡಿದ್ದುಂಟು.


ಜೀವನವನ್ನು ತೆರೆದ ಕಣ್ಣಿನಿಂದ ನೋಡುವ ಆಸಕ್ತಿಯಿದೆ ಎಂದಿದ್ದರೆ, ಕಂಡದ್ದೆಲ್ಲ ಹೊಸತು ಮತ್ತು ಸ್ವಾರಸ್ಯಕರವೇ ಆಗಿರುತ್ತದೆ. ಅಂಥದೊಂದು ಮನಸ್ಥಿತಿಯನ್ನು ಹೊಂದಿರುವ ಗುರುಪ್ರಸಾದರ ಸಾಧನೆಗಳಲ್ಲಿ ಅಲ್ಲಿದ್ದಾಗಲೇ ಮೊಳಕೆಯೊಡದ “ಎಲ್ಲರಂಥವನಲ್ಲ ನನ್ನಪ್ಪ” ಎಂಬ ಪುಸ್ತಕದ ಪ್ರಕಟಣೆಯನ್ನೂ ಸೇರಿಸಿಕೊಳ್ಳಬಹುದು. ಸಿನೆಮಾ ತಯಾರಿಸುವಾಗ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸುವ ಕ್ರಮ ಈಗೀಗ ಜನಪ್ರಿಯವಾಗುತ್ತಿದೆ. ಆದರೆ ಪುಸ್ತಕಕ್ಕೆಂದು ಲೇಖಕರನ್ನು ಆಹ್ವಾನಿಸಿ, ಸಂಕಲನವೊಂದನ್ನು ಹೊರತಂದದ್ದು ಅದರ ವಿಶೇಷ. ಹಾಗೆಂದೇ ಈ ಕೃತಿಯಲ್ಲಿ ಅದರ ಪ್ರಸ್ತಾಪವಿದೆ. ಅದರ ರಚನೆಯಲ್ಲಿ ನನ್ನನ್ನೂ ಸೇರಿಸಿಕೊಂಡು, ಪುಸ್ತಕವೊಂದರ ಪ್ರಕಟಣೆಯ ಹಿಂದಿನ ಅನುಭವಗಳನ್ನು ನನಗೂ ದೊರಕಿಸಿಕೊಟ್ಟಿದ್ದಾರೆ. ಅಮೆರಿಕಾದ ಜನರ ಸೂಕ್ಷ್ಮತೆ, ಏಕಾಂತಪ್ರಿಯತೆಗೆ ಭಂಗ ಬಂದಾಗ ಅವರು ವರ್ತಿಸುವ ರೀತಿಗಳನ್ನೂ ತಿಳಿಸಿದ್ದಾರೆ. ತಾನು ಅಮೆರಿಕಾ ವಾಸಿಯಾಗುವುದಿಲ್ಲ ಎಂಬ ಪೂರ್ವನಿರ್ಧಾರಿತ ಅಂಶವೇ ಅವರ ಈ ಬರಹದ ಯಶಸ್ಸಿಗೆ ಕಾರಣ ಎನ್ನುವಂತಿದೆ.

ಕಾಲಾನುಕ್ರಮಣದ ದೃಷ್ಟಿಯಿಂದ ಹೇಳಬಹುದಾದರೆ, ಅವರ ಕೃಷಿ ಪ್ರೀತಿಯ ಅಭಿವ್ಯಕ್ತಿಯಾದ “ಗ್ರಾಮ ಡ್ರಾಮಾಯಣ” ಈಗಾಗಲೇ ಬಂದಿದೆ. ಇದು ಅದಕ್ಕಿಂತ ಹಿಂದಿನ ಪ್ರಸಂಗವೇ ಆದರೂ, ತನ್ನ ಮಹತ್ವನ್ನು ಕಳೆದುಕೊಳ್ಳುವುದಿಲ್ಲ. ವಿಶೇಷತಃ ಈ ಕೃತಿಯು ಅಮೆರಿಕಾಕ್ಕೆ ಮೊದಲ ಬಾರಿಗೆ ಹೋಗುವವರಿಗೆ ಉತ್ತಮ ಮಾರ್ಗದರ್ಶಿಯಾದೀತು ಎಂದಂತೂ ಹೇಳಬಲ್ಲೆ! ಮುಂದೆ ನೀವೇ ಓದಿಕೊಳ್ಳಿ.

 

ಶ್ರೀ. ಶಂಕರ ಅಜ್ಜಂಪುರ, ಶಿವಮೊಗ್ಗ

ನನ್ನಅಮೇರಿಕತೆಗಳು (Nanna Amerikategalu)

₹200.00 Regular Price
₹110.00Sale Price
Quantity
    bottom of page